23 Oct 2012


" ಮಲಲಾ ಯೂಸಫ್ಜಾಯ್ ಮತ್ತು ತಾಲಿಬಾನಿ ಪಾಪಿಗಳು "

"ಅವರು ನನ್ನನ್ನು ತಡೆಯಲಾರರು, ನಾನು ನನ್ನ ಶಿಕ್ಷಣವನ್ನು ಪಡೆದೇ ತೀರುತ್ತೇನೆ. ಅದು ಶಾಲೆಯೇ ಆಗಲಿ, ಮನೆಯೇ ಆಗಲಿ ಅಥವಾ ಮತ್ತಾವುದೇ ಜಾಗವಾಗಲಿ, ಶಿಕ್ಷಣ ನನ್ನ ಮೂಲಭೂತ ಹಕ್ಕು" (“ They can not stop me. I will get my education if it is in home, school or any place. Education is my basic right”) ಎಂದು ತನ್ನ ಹಕ್ಕನ್ನು ಪ್ರತಿಪಾದಿಸಿದವಳು "ಮಲಲಾ ಯೂಸಫ್ಜಾಯ್" ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿ ತಾಲಿಬಾನಿಗಳ ಗುಂಡೇಟಿಗೆ ಒಳಗಾದವಳು.

"ಸ್ವಾತ್ ಕಣಿವೆ"ಯು ತಾಲಿಬಾನಿಗಳ ವಶವಾದಂದಿನಿಂದಲೂ ಅಲ್ಲಿ ಅರಾಜಕತೆ
 ತಾಂಡವವಾಡುತ್ತಿತ್ತು. ಜನರ ಮೇಲಿನ ಅಟ್ಟಹಾಸ, ಸಾಮಾಜಿಕ ಕಾರ್ಯಕರ್ತರ ಕಗ್ಗೊಲೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಇತ್ಯಾದಿಗಳು ಹೆಚ್ಚುತ್ತಲೇ ಹೋದವು. ಮೂಲಭೂತವಾದಿಗಳಾದ ತಾಲಿಬಾನಿಗಳು"ಸ್ವಾತ್ ಕಣಿವೆ ಪ್ರದೇಶದಲ್ಲಿ ಹೆಣ್ಣು ಮಕ್ಕಳು ಶಿಕ್ಷಣವನ್ನು ನಿಲ್ಲಿಸಬೇಕು. ಇಲ್ಲದೇ ಹೋದರೆ ಮುಂದಿನ ನಮ್ಮ ಹಿಂಸೆಗೆ ನೀವೆ ಕಾರಣರಾಗುತ್ತೀರಿ" ಎಂದು ಎಚ್ಚರಿಸಿದ್ದೇ ತಡ, ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರು ಹಿಂದೇಟಾಕುವಂತಾಯಿತು. ಶೇ ೭೦% ಹೆಣ್ಣು ಮಕ್ಕಳು ಮನೆಗಳನ್ನು ಬಿಟ್ಟು ಹೊರಬರಲೇ ಇಲ್ಲ. ಅಲ್ಲಿಗೆ ಶಿಕ್ಷಣದ ಆಸೆಯ ಭವಿಷ್ಯದ ಆಶಾಗೋಪುರವನ್ನು ಕಟ್ಟಿಕೊಂಡಿದ್ದ ಮಲಲಾ ಯೂಸಫ್ಜಾಯ್ ತರಹದ ಅನೇಕ ಹೆಣ್ಣು ಮಕ್ಕಳ ಕನಸು ಛಿದ್ರ-ಛಿದ್ರವಾದಂತಾಯಿತು.

ಮಲಲಾ ಮೂಲತಃ ಹೋರಾಟದ ಮನೋಭಾವದವಳು, ಕುಶಾಗ್ರಮತಿ. ಅವಳ ತಂದೆ ಝಯದ್-ದೀನ್-ಯೂಸಫ್ಜಾಯ್ ಕೂಡ ಒಬ್ಬ ದಿಟ್ಟ ಸಾಮಾಜಿಕ ಕಾರ್ಯಕರ್ತ. ತಾಲಿಬಾನಿಗಳ ಬೆದರಿಕೆಗೆ ಎದೆಯೊಡ್ಡಿ ತನ್ನ ಮಗಳನ್ನು ಶಿಕ್ಷಿತಳನ್ನಾಗಿಸುವುದೇ ಅವರ ಗುರಿಯಾಗಿತ್ತು. ಮಲಲಾ ತಾನು ವೈದ್ಯೆಯಾಗಬೇಕೆಂಬ ಆಸೆಯುಳ್ಳವಳಾದರೆ, ತಂದೆಗೆ ಅವಳು ಒಬ್ಬ ರಾಜಕೀಯ ನಾಯಕಿಯಾಗಬೇಕೆಂಬುದೇ ದೊಡ್ಡ ಕನಸು, ಅದಕ್ಕೆ ಅವರು ಕೊಡುವ ಕಾರಣ " ನನ್ನ ಮಗಳು ವೈದ್ಯೆಯಾಗಿ ಸಾಧಿಸುವುದಕ್ಕಿಂತ ಹೆಚ್ಚಿನದನ್ನು ಒಬ್ಬ ನಾಯಕಿಯಾಗಿ ಸಾಧಿಸಬಲ್ಲಳು, ಅವಳಲ್ಲಿ ಅಂತಹ ಶಕ್ತಿಯಿದೆ" ಎಂಬುದು.

“Stop girls education through guns” ಎಂಬ ತಾಲಿಬಾನಿಗಳ ಮೂಲಭೂತವಾದಿ ಧ್ಯೇಯ ವಾಕ್ಯವು ಇಡೀ ಸ್ವಾತ್ ಕಣಿವೆಯ ಹೆಣ್ಣುಮಕ್ಕಳ ಶಿಕ್ಷಣವನ್ನು ಬಂದೂಕಿನ ಕೊಳವೆಯ ತುದಿಯಲ್ಲಿ ನಲುಗುವಂತೆ ಮಾಡಿತು. ಜನವರಿ ೧೫, ೨೦೦೯ರ ನಂತರ ಸ್ವಾತ್ ಕಣಿವೆಯ ಯಾವೊಬ್ಬ ಹುಡುಗಿಯೂ ಶಾಲೆಗೆ ಹೋಗುವಂತಿಲ್ಲ ಎಂಬ ಫತ್ವ ಹೊರಡಿಸಿದ ತಾಲಿಬಾನಿಗಳ ಮಾತನ್ನು ಧಿಕ್ಕರಿಸಿದ ಅನೇಕ ಸಾಮಾಜಿಕ ಕಾರ್ಯಕರ್ತರ ರುಂಡಗಳನ್ನು ಕತ್ತರಿಸಿ ಶವಗಳನ್ನು ಬೀದಿಗಳಲ್ಲಿ ಎಸೆಯಲಾಯಿತು. ಶಾಲೆಗಳಿಗೆ ಹೋಗುವ ಹೆಣ್ಣುಮಕ್ಕಳ ಮುಖದ ಮೇಲೆ ಆಸಿಡ್ ದಾಳಿ ಮತ್ತು ಬೆನ್ನ ಮೇಲೆ ಛಡಿ ಏಟುಗಳಂತಹ ಶಿಕ್ಷಿಯನ್ನು ವಿಧಿಸುತ್ತಿದ್ದರು. ತಾಲಿಬಾನಿಗಳ ಅಟ್ಟಹಾಸ ಹೆಚ್ಚುತ್ತಿದ್ದಂತೆ ಸ್ವಾತ್ ಕಣಿವೆಯ ಬಹುಪಾಲು ಜನರು ಅಲ್ಲಿಂದ ಬೇರೆ ಬೇರೆ ಸ್ಥಳಗಳಿಗೆ ಹೊರಟುನಿಂತರು. ಸರ್ಕಾರದ ಆಜ್ಞೆಯಂತೆ ಮಲಲಾ ಕುಟುಂಬವು ಸಹ ಅನಿವಾರ್ಯವಾಗಿ ಸ್ವಾತ್ ಕಣಿವೆಯನ್ನು ತೊರೆಯಬೇಕಾಯಿತು.

ತಾಲಿಬಾನ್ ಆಕ್ರಮಿತ ಸ್ವಾತ್ ಕಣಿವೆಯಿಂದ ತಾಲಿಬಾನಿಗಳನ್ನು ಹಿಮ್ಮೆಟ್ಟಿಸಲು ಸರ್ಕಾರವು ಮುಂದಾಯಿತು. ತನ್ನ ಮಿಲಿಟರಿ ಶಕ್ತಿಯನ್ನು ಉಪಯೋಗಿಸಿ ಅಲ್ಲಿಂದ ಅವರನ್ನು ಹಿಮ್ಮೆಟ್ಟಿಸಿದರಾದರೂ ಅಷ್ಟು ಹೊತ್ತಿಗಾಗಲೇ ಸ್ವಾತ್ ಕಣಿವೆ ಸಿಡಿಮದ್ದು, ಬಂದೂಕಿನ ನರ್ತನದಿಂದ ನಲುಗಿ ಹೋಗಿತ್ತು. ಸಾಲದೆಂಬತೆ ೨೦೦ಕ್ಕೂ ಹೆಚ್ಚು ಶಾಲೆಗಳು ಛಿದ್ರಗೊಂಡಿದ್ದವು. ೩ ತಿಂಗಳುಗಳ ಕಾಲ ಸ್ವಾತ್ ಕಣಿವೆಯಿಂದ ದೂರವಾಗಿದ್ದ ಮಲಲಾ ಕುಟುಂಬ ಮತ್ತೆ ತಮ್ಮ ತವರು ನೆಲಕ್ಕೆ ಬಂದಿಳಿದಾಗ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಸ್ವಾತ್ ಕಣಿವೆಯ ನಿಶಬ್ಧತೆಯನ್ನು ವೀಕ್ಷಿಸಿದ ತಂದೆ ಝಯದ್-ದೀನ್-ಯೂಸಫ್ಜಾಯ್ "ನಾನೆಂದೂ ಇಂತಹ ನಿಶಬ್ಧತೆಯನ್ನು ಸ್ವಾತ್ ಕಣಿವೆಯಲ್ಲಿ ಕಂಡಿರಲಿಲ್ಲ" ಎಂದು ಹೇಳುವಾಗ ಅವರ ಕಣ್ಣಂಚಿಂದ ನೀರು ಸುರಿಯಲಾರಂಭಿಸಿತು.

ಮಲಲಾ, ತಾನು ಮತ್ತು ತನ್ನವರು ತಾಲಿಬಾನಿಗಳ ನೆಲದಲ್ಲಿ ಅನುಭವಿಸುತ್ತಿರುವ ಯಾತನಾ ಬದುಕನ್ನು BBCಯ ಪತ್ರಿಕೆಯಲ್ಲಿ ಬರೆಯಲಾರಂಭಿಸಿದಳು. ತಾಲಿಬಾನಿಗಳ ವಿರುದ್ಧವಾದ ಹೇಳಿಕೆಗಳು, ಸ್ತ್ರೀ ಶಿಕ್ಷಣದ ಪರವಾದ ತನ್ನ ನಿಲುವು ಇತ್ಯಾದಿಗಳನ್ನು ಅರ್ಥವತ್ತಾಗಿ ಬರೆಯಲಾರಂಭಿಸಿದ್ದು ಮೂಲಭೂತವಾದಿ ತಾಲಿಬಾನಿಗಳ ತಲೆ ಕೆಡುವಂತೆ ಮಾಡಿತು. ಸ್ವಾತ್ ಕಣಿವೆಯು ಶಾಂತವಾದ ನಂತರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಧನಿ ಎತ್ತಿದಳು. ೨೦೦೯ರ ಆಗಸ್ಟನ ನಂತರ ಶಾಲೆಗಳು ಪ್ರಾರಂಭವಾಯಿತಾದರೂ, ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಹಾಜರಾತಿ ಬಹಳ ಕ್ಷೀಣಿಸಿತ್ತು. ಶಿಕ್ಷಕರು ತಮ್ಮ ಪ್ರಾಣ ಪಕ್ಷಿ ಯಾವ ಸಮಯದಲ್ಲಿ ಹಾರಿ ಹೋಗುವುದೋ ಎಂಬ ಒತ್ತಡದಲ್ಲಿದ್ದರು.

ತಂದೆಯ ಉತ್ತೇಜನದಿಂದಾಗಿ, ಧೃತಿಗೆಡದೆ ಮುನ್ನುಗ್ಗಿದ ಮಲಲಾ, ನಿರಂತರವಾಗಿ BBC ಪತ್ರಿಕೆಗೆ ತನ್ನ ಲೇಖನಗಳ ಸರಣಿಯನ್ನು ಬರೆಯುತ್ತಿದ್ದಳು. ತಾಲಿಬಾನಿಗಳನ್ನು ಉದ್ದೇಶಿಸಿ “How dare the Taliban take away my basic right to education” ಎಂಬ ಆಕ್ರೋಶಭರಿತ ಮಾತುಗಳು ತಾಲಿಬಾನಿಯರಲ್ಲಿ ಮಲಲಾಳ ಕೊಲೆಯ ಯೋಚನೆ ಬರುವಂತೆ ಮಾಡಿತು. ತಾಲಿಬಾನಿಗಳ ಅಜೆಂಡಾದ ಪ್ರಕಾರ " ಇಸ್ಲಾಂ ವಿರೋಧಿಯಾಗಿ ಮಾತನಾಡುವ ಯಾರೊಬ್ಬರೂ ಬದುಕಲು ಯೋಗ್ಯರಲ್ಲ, ಅವರು ದೊಡ್ಡವರೇ ಆಗಲಿ ಅಥವಾ ಸಣ್ಣವರೇ ಆಗಲಿ ಅವರು ಶಿಕ್ಷೆಗೆ ಅರ್ಹರು" ಎಂದು ಮಲಲಾಳ ಮೇಲಿನ ಆಕ್ರಮಣವನ್ನು ಸಮರ್ಥಿಸಿಕೊಳ್ಳುತ್ತ ತಂಡದ ಮುಖ್ಯಸ್ಥ "ಮೌಲಾನಾ ಫಜುಲ್ಲಾ" ಹೇಳಿಕೊಂಡನು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡುವುದು ಇಸ್ಲಾಂ ವಿರೋಧಿ ಚಟುವಟಿಕೆಯೇ? ಅದನ್ನು ಅಲ್ಲಾ ಹೇಳಿದನೇ? ಅಥವಾ ಪವಿತ್ರ ಖುರಾನಿನಲ್ಲಿ ಉಲ್ಲೇಖಿತವಾಗಿದೆಯೇ? ಇಂತಹ ಮಾತುಗಳು ಕೇವಲ ಮುಸ್ಲಿಂ ಮೂಲಭೂತವಾಧಿಗಳದೇ ಹೊರತು ಇಸ್ಲಾಂ ಧರ್ಮದ್ದಲ್ಲ. ಧರ್ಮವು ಎಂದೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿರೋಧಿಯಲ್ಲ ಎಂಬುದು ಮಲಲಾಳಂತಹ ಪುಟ್ಟ ಹೋರಾಟಗಾರ್ತಿಯ ಮಾತುಗಳಿಂದ ತಿಳಿದುಕೊಳ್ಳುವುದನ್ನು ಬಿಟ್ಟು ಇಸ್ಲಾಂ ವಿರೋಧಿಯಾಗಿ ನಡೆದುಕೊಳ್ಳುತ್ತಿರುವುದು ತಾಲಿಬಾನಿ ಸಂಘಟನೆಯಲ್ಲದೆ ಮಲಲಾಳಲ್ಲ.

ಆಕೆಯ ಹೋರಾಟದ ಮನೋಭಾವ, ಅವಳಲ್ಲಿ ಮೊಳಕೆಯೊಡೆದಿದ್ದಂತಹ ಸ್ತ್ರೀ ಶಿಕ್ಷಣ ಜಾಗೃತಿಯನ್ನು ಗುರುತಿಸಿ “Kids rights foundation” ಸಂಸ್ಥೆಯು ಆಕೆಗೆ "ಅಂತರರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿ" ನೀಡಿ ಗೌರವಿಸಿತು. ತದನಂತರ ಪಾಕಿಸ್ತಾನ ಸರ್ಕಾರವು "ರಾಷ್ಟ್ರೀಯ ಯುವ ಶಾಂತಿ ಪ್ರಶಾಸ್ತಿ" ನೀಡಿ ಗೌರವಿಸಿತು. ಇದರಿಂದ ಕುಪಿತಕ್ಕೊಳಗಾದ ತಾಲಿಬಾನಿಯರು ಮಲಲಾಳನ್ನು ಮುಗಿಸಲೇ ಬೇಕೆಂದು ನಿರ್ಧರಿಸಿದರು. "ಮಲಲಾ ಅನೀತಿಯ ಮತ್ತು ಅಸಭ್ಯತೆಯ ಚಿಹ್ನೆ" ಎಂದು ಭಾವಿಸಿದರು. ೨೦೧೨ ಅಕ್ಟೋಬರ್ ೧೨ರಂದು ಶಾಲೆಯಿಂದ ಮನೆಗೆ ಶಾಲಾ ವಾಹನದಲ್ಲಿ ವಾಪಾಸಾಗುವಾಗ ಏಕಾಏಕಿ ವಾಹನದೊಳಗೆ ನುಗ್ಗಿದ ತಾಲಿಬಾನಿ ಬಂದೂಕುದಾರಿಗಳು ಹದಿನಾಲ್ಕು ವರ್ಷದ ಮಲಲಾ ಮತ್ತು ತನ್ನಿಬ್ಬರು ಸಹಪಾಠಿಗಳ ಮೇಲೆ ಗುಂಡು ಸಿಡಿಸಿದರು. "ನಿಮ್ಮ ಶಕ್ತಿಯಿಲ್ಲದ ಗುಂಡೇಟಿಗೆ ನಾ ಹೆದರಲಾರೆ" ಎಂಬ ಸಂದೇಶದ ಕುರುಹಿನಂತೆ ಮಲಲಾ ಪವಾಡ ಸಧೃಶ್ಯವಾಗಿ ಬದುಕುಳಿದಿದ್ದಾಳೆ. ಸ್ವತಃ "ಅಲ್ಲಾ"ದೇವನೇ ಅವಳ ಹೋರಾಟವನ್ನು ಪ್ರೋತ್ಸಾಹಿಸಿ ಮತ್ತೆ ಹೋರಾಟಕ್ಕಿಳಿ ಎಂದು ಅವಳ ಬೆನ್ನು ತಟ್ಟಿ ಕಳುಹಿಸಿದ್ದಾನೆ.

ಶಿಕ್ಷಣ ಪ್ರತಿಯೊಬ್ಬ ನಾಗರೀಕನ ಹಕ್ಕು. ಲಿಂಗ ಭೇಧದ ನೆಪವೊಡ್ಡಿ ಶಿಕ್ಷಣದಿಂದ ಹೆಣ್ಣು ಮಕ್ಕಳನ್ನು ದೂರ ಉಳಿಯುವಂತೆ ಮಾಡುವುದು ಅವರ ಮೂಲಭೂತ ಹಕ್ಕನ್ನು ಕಸಿದಂತೆಯೇ ಸರಿ. ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕಿಲ್ಲ ಎಂದು ಯಾವ ಧರ್ಮವು ಎಲ್ಲೂ ಸಾರುವುದಿಲ್ಲ. ಸಾರುವುದಾದರೆ ಅದು ಧರ್ಮ ವಿರೋಧಿ ತಾಲಿಬಾನಿಗಳಿಂದ ಮಾತ್ರ ಸಾಧ್ಯ. ಎಲ್ಲಾ ಧರ್ಮಗಳು "ಹೆಣ್ಣು ರಕ್ಷಣೆಗೆ ಅರ್ಹಳು" ಎಂದು ತಿಳಿಸಿವೆಯೇ ಹೊರತು, ರಕ್ಷಣೆಯ ಹೆಸರಿನಲ್ಲಿ ಅವಳ ಹಕ್ಕನ್ನು ಕಸಿದುಕೊಳ್ಳಬೇಕೆಂದಲ್ಲ. ಮಲಲಾಳಂತಹ ಹೋರಾಟಗಾರ್ತಿಯರ ಪರಿಶ್ರಮದಿಂದ ಅನೇಕ ಹೆಣ್ಣುಮಕ್ಕಳಿಗೆ ಶಿಕ್ಷಣ ದೊರೆಯುವಂತಾಗಿರುವುದೇ ಇದಕ್ಕೆ ನೈಜ್ಯ ಸಾಕ್ಷಿ. ಸ್ತ್ರೀ ಶಿಕ್ಷಣಕ್ಕಾಗಿ ಹೋರಾಡುತ್ತಿರುವ ಮಲಲಾ ತನ್ನ ಜೀವ ಉಳಿಸಿಕೊಳ್ಳುವ ಹೋರಾಟದಲ್ಲಿ ಜಯಿಸಿ ಮತ್ತೆ ಕ್ರಿಯಾಶೀಲಳಾಗಲಿ, ತಾಲಿಬಾನಿಗಳಂತಹ ದುಷ್ಟ ಶಕ್ತಿಗಳು ತೊಲಗಲಿ ಎಂಬುದೇ ಅನೇಕರ ಆಶಯ.

No comments:

Post a Comment